ಅಂತಾರಾಷ್ಟ್ರೀಯಉಡುಪಿದಕ್ಷಿಣ ಕನ್ನಡಪುತ್ತೂರು-ಸುಳ್ಯಬೆಳ್ತಂಗಡಿ-ಬಂಟ್ವಾಳಮಂಗಳೂರುಮೂಲ್ಕಿ-ಮೂಡುಬಿದ್ರಿ

ಶಿರ್ವ: ಅತ್ಯಾಚಾರಕ್ಕೊಳಗಾದ ಯುವತಿಯ ಮಗು ಮಾರಾಟ.ಡಾಕ್ಟರ್ ಸೇರಿ ಮೂವರು ಅರೆಸ್ಟ್

ಶಿರ್ವ: ಅತ್ಯಾಚಾರಕ್ಕೆ ಒಳಗಾಗಿದ್ದ ಯುವತಿಯನ್ನು ಹೆರಿಗೆ ಮಾಡಿಸಿ, ಬಳಿಕ ಮಗುವನ್ನು ಮಾರಾಟ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಶಿರ್ವ ಪೊಲೀಸರು ವೈದ್ಯ ಸೇರಿದಂತೆ ಒಟ್ಟು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಿ.ಸಿ.ರೋಡಿನ ವೈದ್ಯ ಡಾ.ಸೋಮೇಶ್ ಸೊಲೊಮನ್, ಮಂಗಳೂರಿನಲ್ಲಿ ಪಿಜಿ ನಡೆಸುತ್ತಿರುವ ವಿಜಯಲಕ್ಷ್ಮೀ ಯಾನೆ ವಿಜಯ ಮತ್ತು ಅತ್ಯಾಚಾರ ಎಸಗಿದ ಆರೋಪಿ ನವನೀತ್ ನಾರಾಯಣ(25) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

ಹಲವು ವರ್ಷಗಳಿಂದ ಮಕ್ಕಳಾಗದ ಕಾರಣಕ್ಕೆ ಶಿರ್ವ ಪೊಲೀಸ್‌ ಠಾಣಾ ವ್ಯಾಪ್ತಿಯ 92ನೇ ಹೇರೂರು ಗ್ರಾಮದ ಕಲ್ಲುಗುಡ್ಡೆ ನಿವಾಸಿ ಪ್ರಭಾವತಿ ಹಾಗೂ ರಮೇಶ್ ಮೂಲ್ಯ ದಂಪತಿ, ಮಗು ದತ್ತು ಪಡೆಯುವ ಬಗ್ಗೆ ಅವರ ಚಿಕ್ಕಮ್ಮನ ಮಗಳು ಪ್ರಿಯಾಂಕ ಅವರಲ್ಲಿ ತಿಳಿಸಿದ್ದರು.

ಪ್ರಿಯಾಂಕ ಈ ವಿಚಾರದಲ್ಲಿ ದಂಪತಿಗೆ ವಿಜಯಲಕ್ಷ್ಮೀ ಅವರನ್ನು ಪರಿಚಯ ಮಾಡಿಸಿದ್ದರು. ವಿಜಯಲಕ್ಷ್ಮೀಯ ಪೇಯಿಂಗ್ ಗೆಸ್ಟ್‌ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರ ಬಳಿ ಮಗಳು ನಾಲ್ಕು ತಿಂಗಳ ಗರ್ಭಿಣಿಯಾಗಿದ್ದು, ಆ ಮಗುವನ್ನೇ ನೀಡುವುದಾಗಿ ವಿಜಯಲಕ್ಷ್ಮೀ ದಂಪತಿಗೆ ತಿಳಿಸಿದ್ದರು. ಹೀಗೆ ಗರ್ಭದಲ್ಲಿರುವ ಈ ಮಗುವನ್ನು ಹೆರಿಗೆಯ ಬಳಿಕ ಈ ದಂಪತಿಗೆ ಮಾರಾಟ ಮಾಡಲು ವಿಜಯಲಕ್ಷ್ಮೀ ಹಾಗೂ ಡಾ.ಸೋಮೇಶ್ ಯೋಜನೆ ಹಾಕಿಕೊಂಡರೆನ್ನಲಾಗಿದೆ.

ಗರ್ಭಿಣಿ ಯುವತಿ ಸ್ಕ್ಯಾನಿಂಗ್‌ಗೆ ಹೋದಾಗಲೆಲ್ಲ ಇವರು ಆಕೆಯ ಆಧಾ‌ರ್ ಕಾರ್ಡ್ ಬದಲು ಶಿರ್ವದ ಪ್ರಭಾವತಿ ಅವರ ಆಧಾರ್ ಕಾರ್ಡ್ ನೀಡುತ್ತಿದ್ದರು. ಹೀಗೆ ಗರ್ಭದಲ್ಲಿರುವಾಗಲೇ ಈ ಮಗು ಪ್ರಭಾವತಿ ಅವರದ್ದಾಗಿ ಮಾಡುವ ಪ್ಲಾನ್ ಇವರದ್ದಾಗಿತ್ತು. ಯುವತಿ ಆ.3ರಂದು ಮಂಗಳೂರಿನ ಕೊಲಾಸೋ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಆ ಮಗುವನ್ನು ವಿಜಯಲಕ್ಷ್ಮೀ ಹಾಗೂ ಡಾ.ಸೋಮೇಶ್, ಪ್ರಭಾವತಿ ದಂಪತಿಗೆ 4.5 ಲಕ್ಷ ರೂ. ಹಣಕ್ಕೆ ಮಾರಾಟ ಮಾಡಿದರು ಎಂದು ಎಸ್ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.

ಪೊಲೀಸರು ತನಿಖೆ ನಡೆಸಿದಾಗ ವಿಜಯಲಕ್ಷ್ಮೀಯ ಪೇಯಿಂಗ್ ಗೆಸ್ಟ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ಯುವತಿ ಅತ್ಯಾಚಾರದಿಂದ ಗರ್ಭವತಿಯಾಗಿದ್ದಳು ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.ಯುವತಿ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದು, ಈಕೆಯನ್ನು ಅವರ ಪರಿಚಯದ ನವನೀತ್ ನಾರಾಯಣ ಅತ್ಯಾಚಾರ ಎಸಗಿ ಗರ್ಭವತಿಯನ್ನಾಗಿ ಮಾಡಿದ್ದ. ಇದೇ ಕಾರಣಕ್ಕೆ ಯುವತಿ ಹಾಗೂ ಆಕೆಯ ತಾಯಿಯನ್ನು ವಿಜಯಲಕ್ಷ್ಮೀ ಪೆಯಿಂಗ್ ಗೆಸ್ಟ್‌ನಲ್ಲಿ ಕೆಲಸಕ್ಕೆ ಇಟ್ಟುಕೊಂಡಿದ್ದರು ಎಂದು ಎಸ್ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.

Related posts

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ವೈಭವದ ಗಂಗಾರತಿ

Udupilive News

ಶಂಕರನಾರಾಯಣ: ಮಳೆಗೆ ಅಪಾರ ಹಾನಿ: ಮರ ಬಿದ್ದು ಕಾರಿಗೆ ಹಾನಿ

Udupilive News

ಅನಾರೋಗ್ಯ ಪೀಡಿತ ಕುಟುಂಬದ ಮನೆಗೆ ತೆರಳಿ ಆಧಾರ್ ತಿದ್ದುಪಡಿ:ಅಂಚೆ ಅಧಿಕಾರಿಗಳ ಸೇವೆಗೆ ಸಾರ್ವಜನಿಕರಿಂದ ಮೆಚ್ಚುಗೆ

Udupilive News

Leave a Comment