ಉಡುಪಿಕಾಪುಕಾರ್ಕಳಕುಂದಾಪುರಬೈಂದೂರುಬ್ರಹ್ಮಾವರರಾಜ್ಯ

ಕಸ್ತೂರಿ ರಂಗನ್ ವರದಿ ಕರಡು ಅಧಿಸೂಚನೆಗೆ ಆಕ್ಷೇಪ – ಮಲೆನಾಡು ಕರಾವಳಿ ಒಕ್ಕೂಟದಿಂದ ಕೇಂದ್ರಕ್ಕೆ ಪತ್ರ

ಬೆಂಗಳೂರು: ಕಸ್ತೂರಿ ರಂಗನ್ ಸಮಿತಿ ವರದಿ ಆಧರಿಸಿ ಪಶ್ಚಿಮ ಘಟ್ಟಗಳಲ್ಲಿ ಪರಿಸರ ಸೂಕ್ಷ್ಮ ವಲಯವನ್ನು ಗುರುತಿಸಿ ಕೇಂದ್ರ ಸರ್ಕಾರ ಹೊರಡಿಸಿರುವ ಆರನೇ ಕರಡು ಅಧಿಸೂಚನೆಗೆ ಆಕ್ಷೇಪ ವ್ಯಕ್ತಪಡಿಸಿ ಮಲೆನಾಡು – ಕರಾವಳಿ ಜನಪರ ಒಕ್ಕೂಟ ಕೇಂದ್ರ ಪರಿಸರ ಮತ್ತು ಅರಣ್ಯ ಖಾತೆ ಸಚಿವರು ಮತ್ತು ಕಾರ್ಯದರ್ಶಿಗೆ ಪತ್ರ ಬರೆದಿದೆ.

ಇದೊಂದು ಪೂರ್ವಗ್ರಹ ಪೀಡಿ ವರದಿಯಾಗಿದ್ದು ಇದನ್ನು ತಿರಸ್ಕರಿಸಬೇಕು. ಸ್ಥಳೀಯ ಪ್ರತಿನಿಧಿಗಳನ್ನೊಳಗೊಂಡ ಹೊಸ ಪರಿಣಿತ ತಂಡವನ್ನು ನೇಮಿಸಿ ವರದಿಯನ್ನು ಆಮೂಲಾಗ್ರವಾಗಿ ಪರಿಶೀಲಿಸಬೇಕು ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುಧೀರ್ ಕುಮಾರ್ ಮುರೊಳ್ಳೀ, ಪ್ರಧಾನ ಸಂಚಾಲಕ ಅನಿಲ್ ಹೊಸಕೊಪ್ಪ ಪತ್ರದಲ್ಲಿ ಆಗ್ರಹಿಸಿದ್ದಾರೆ.

ಪತ್ರದಲ್ಲಿರುವ ಆಕ್ಷೇಪಣೆಗಳು:

  • ಕಸ್ತೂರಿ ರಂಗನ್ ಸಮಿತಿ ವರದಿಯು ಅವೈಜ್ಞಾನಿಕವಾಗಿದೆ. ಈ ಸಮಿತಿ ಉಪಗ್ರಹ ಚಿತ್ರದ ಆಧಾರದಲ್ಲಿ ಗುರುತಿಸಿರುವುದು ವಾಸ್ತವದಲ್ಲಿರುವ ಚಿತ್ರಣಕ್ಕಿಂತ ವ್ಯತಿರಿಕ್ತವಾಗಿದೆ. ಸಮಿತಿಯು ಈ ಭಾಗಕ್ಕೆ ಭೇಟಿ ಕೊಡದೇ ವಾಸ್ತವ ಅರಿಯದೇ ವರದಿ ನೀಡಿದೆ.
  • ಉಪಗ್ರಹ ಆಧಾರಿತ ಸಮೀಕ್ಷೆಯಲ್ಲಿ ಅಡಿಕೆ, ತೆಂಗಿನ ತೋಟ, ಕಾಫಿ, ರಬ್ಬರ್ ಹಾಗೂ ಇನ್ನಿತರ ಕೃಷಿ ತೋಟಗಾರಿಕೆ ಬೆಳೆಗಳಿರುವ ಪ್ರದೇಶವನ್ನು ಅರಣ್ಯವೆಂದು ಪರಿಗಣಿಸಿರುವುದು ನಿಸರ್ಗಕ್ಕೆ ವಿರೋಧವಾದ ಕ್ರಮ.
  • ಈ ಭಾಗದ ಗ್ರಾಮಗಳ ಶೇ 20ಕ್ಕಿಂತ ಹೆಚ್ಚು ಭೌಗೋಳಿಕ ಪ್ರದೇಶವನ್ನು ಜೀವವೈವಿಧ್ಯ ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಸೇರಿಸಿದ್ದು, ಇದು ಅವೈಜ್ಞಾನಿಕವಾಗಿದೆ. ಘೋಷಿಸಿದ ಪ್ರದೇಶದಲ್ಲಿರುವ ಗ್ರಾಮಗಳ ಜನರನ್ನು ಭೇಟಿಯಾಗಿ ಅಥವಾ ಖುದ್ದು ಸಮೀಕ್ಷೆ ಮಾಡಿ ಮಾಹಿತಿ ಸಂಗ್ರಹಿಸಿಲ್ಲ. ಸೂಕ್ಷ್ಮ ಪ್ರದೇಶ ಘೋಷಣೆಯಿಂದ ಗ್ರಾಮಸ್ಥರ ಮತ್ತು ಅರಣ್ಯ ವಾಸಿಗಳ ಜೀವನದ ಮೇಲೆ ಯಾವ ರೀತಿಯ ಪರಿಣಾಮ ಆಗಬಹುದೆಂಬ ಅವಲೋಕನವೂ ನಡೆದಿಲ್ಲ.
  • ಪಶ್ಚಿಮ ಘಟ್ಟದ ರಕ್ಷಣೆ ಮತ್ತು ಸಂರಕ್ಷಣೆಗಾಗಿ ಈಗಾಗಲೇ ಕಾನೂನು, ನಿಯಮಗಳಿವೆ. ಹೊಸ ಮಾನದಂಡದ ಅವಶ್ಯಕತೆ ಇಲ್ಲ. ಪರಿಸರ ಸೂಕ್ಷ್ಮ ಪ್ರದೇಶದ ಘೋಷಣೆ ಈ ಭಾಗದ ಅಭಿವೃದ್ಧಿಗೆ ಮಾರಕವಾಗುತ್ತದೆ.
  • ವರದಿಯು ಕೃಷಿ ಹಾಗೂ ತೋಟಗಾರಿಕೆ ಆಧಾರಿತ ಉದ್ಯಮಗಳ ಅಸ್ತಿತ್ವವನ್ನು ನಿರ್ಲಕ್ಷಿಸಿದೆ. ಈ ಪ್ರದೇಶದಲ್ಲಿ ನೀರು ಪೂರೈಕೆ, ರಸ್ತೆ ಅಭಿವೃದ್ಧಿಯಂತಹ ಮೂಲಸೌಕರ್ಯಗಳನ್ನು ನಿರ್ಬಂಧಿಸುವುದರಿಂದ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತದೆ.
  • ಹಿಂದಿನ ಕರಡು ಅಧಿಸೂಚನೆಗೆ ರಾಜ್ಯಗಳು ಸಲ್ಲಿಸಿದ ಆಕ್ಷೇಪಣೆ ಮತ್ತು ಸಲಹೆಗಳ ಕುರಿತು ಪುನರ್ ಪರಿಶೀಲಿಸಲು ನಿವೃತ್ತ ಐಐಎಸ್ ಅಧಿಕಾರಿ ಸಂಜಯ್ ನೇತೃತ್ವದಲ್ಲಿ ರಚಿಸಿದ್ದ ಸಮಿತಿ ಈ ಭಾಗದ ಯಾವುದೇ ಹಳ್ಳಿಗಳಿಗೆ ಭೇಟಿ ನೀಡಿ ವಾಸ್ತವಿಕತೆಯನ್ನು ಪರಿಶೀಲಿಸಿಲ್ಲ.

 

Related posts

ವಿದ್ಯುತ್ ಪ್ರಸರಣ ಕಾಮಗಾರಿ: ರೈತರಿಗೆ ತೊಂದರೆಯಾಗದಂತೆ ಕ್ರಮ

Udupilive News

ಉಡುಪಿ ಜಿಲ್ಲಾ ಜ್ಯೂನಿಯರ್ ಅಥ್ಲೆಟಿಕ್ ಮೀಟ್ ಉದ್ಘಾಟನೆ

Udupilive News

ಆಲ್ವಿನ್ ಡಿಸೋಜಾ ಹಲ್ಲೆಕೋರರನ್ನು ಶೀಘ್ರ ಬಂಧಿಸಿ – ಕಥೊಲಿಕ್ ಸಭಾ ಉಡುಪಿ ಪ್ರದೇಶ ಆಗ್ರಹ

Udupilive News

Leave a Comment